
ಸರ್ಕಾರಿ ಅಧಿಕಾರಿಗಳಿಗೆ ದಾಳಿ ಬೆದರಿಕೆಯೊಡ್ಡಿ, ಲಕ್ಷಾಂತರ ರೂಪಾಯಿ ವಸೂಲಿ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ತನಿಖಾಧಿಕಾರಿ ಮುಂದೆ ಐಪಿಎಸ್ ಅಧಿಕಾರಿ ಶ್ರೀನಾಥ್ ಮಹದೇವ ಜೋಶಿ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.ಪ್ರಕರಣ ಸಂಬಂಧ ಮಂಗಳವಾರ ವಿಚಾರಣೆ ಹಾಜರಾಗುವಂತೆ ಶ್ರೀನಾಥ್ ಜೋಶಿ ಅವರಿಗೆ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರು ನೋಟಿಸ್ ಜಾರಿ ಮಾಡಿದ್ದರು. ಇದರಂತೆ, ಮಂಗಳವಾರ ಬೆಳಗ್ಗೆ ಹಾಜರಾಗಿ ಸುಮಾರು 5 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.ಪ್ರಕರಣದಲ್ಲಿ ಬಂಧಿತರಾದ ನಿಂಗಪ್ಪ ಪರಿಚಯವಾಗಿದ್ದು ಹೇಗೆ? ಯಾವಾಗ? ದಾಳಿ ಭೀತಿ ಹುಟ್ಟಿಸಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದು, ನಿಮ್ಮ ಗಮನಕ್ಕೆ ಬಂದಿದ್ದು ಯಾವಾಗ? ಅಕ್ರಮದಲ್ಲಿ ನೀವೂ ಶಾಮೀಲಾಗಿರುವ ಆರೋಪಕ್ಕೆ ಏನು ಹೇಳುವಿರಿ? ಎಂದು ತನಿಖಾಧಿಕಾರಿಗಳು ಹತ್ತು ಹಲವು ಪ್ರಶ್ನೆಗಳನ್ನು ಕೇಳಿದರು. ತಮ್ಮ ಮೇಲಿನ ಬಂದಿರುವ ಆಪಾದನೆಗಳ ಬಗ್ಗೆ ಶ್ರೀನಾಥ್ ಅವರು ತಳ್ಳಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡು ಮೊಬೈಲ್ ವಶಕ್ಕೆ ಪಡೆದ ತನಿಖಾಧಿಕಾರಿ: ಲೋಕಾಯುಕ್ತ ಎಸ್ಪಿ-1 ಆಗಿ ಕಾರ್ಯ ನಿರ್ವಹಣೆ ವೇಳೆ ಶ್ರೀನಾಥ್ ಜೋಶಿ ಅವರು ಬಳಸುತ್ತಿದ್ದ ಎರಡು ಮೊಬೈಲ್ಗಳನ್ನು ಲೋಕಾಯುಕ್ತ ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ಧಾರೆ. ಮೊಬೈಲ್ ಪರಿಶೀಲನೆ ವೇಳೆ ಕೆಲ ಫೋಟೊ ಹಾಗೂ ವಾಟ್ಸ್ಆ್ಯಪ್ ಸಂದೇಶಗಳು ಡಿಲೀಟ್ ಆಗಿರುವುದು ಕಂಡುಬಂದಿದೆ. ಸತ್ಯಾಸತ್ಯತೆ ಅರಿಯಲು ರಿಟ್ರೀವ್ ಮಾಡಲು ಎರಡು ಮೊಬೈಲ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗುವುದು. ವರದಿ ಬಂದ ಬಳಿಕ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.”ಸರ್ಕಾರಿ ಅಧಿಕಾರಿಗಳಿಗೆ ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿ ನನಗೆ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಪರಿಚಯ” ಎಂದು ಆ ಸೋಗಿನಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಹಣ ಸುಲಿಗೆ ಮಾಡುತ್ತಿದ್ದ ಎಸ್ಪಿಯಾಗಿದ್ದ ಶ್ರೀನಾಥ್ ಮಹದೇವ ಜೋಶಿ, ಐಪಿಎಸ್ ನಿಕಟ ಸಂಪರ್ಕ ಇಟ್ಟುಕೊಂಡು ಸರ್ಕಾರಿ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಬೆದರಿಸಿ, ಅವರಿಂದ ಲಂಚದ ಹಣವನ್ನು ಕೋಡ್ ವರ್ಡ್ ‘ಕೆ.ಜಿ’ ಮುಖಾಂತರ ವಸೂಲಿಗಿಳಿದ್ದರು. ಅಕ್ರಮವಾಗಿ ಗಳಿಸಿದ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಲು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ನಿಂಗಪ್ಪನ ಮೊಬೈಲ್ ಪರಿಶೀಲನೆಯಲ್ಲಿ, ಸುಮಾರು 24 ಕ್ರಿಪ್ಟೋ ವ್ಯಾಲೆಟ್ಗಳಿದ್ದು, ಈ ಪೈಕಿ 13 ವ್ಯಾಲೆಟ್ಗಳಲ್ಲಿ ಸುಮಾರು 4.92 ಕೋಟಿ ರೂ. ಹಣ ಹೂಡಿಕೆ ಮಾಡಿರುವುದು ತಿಳಿದುಬಂದಿದೆ” ಎಂದು ಲೋಕಾಯುಕ್ತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದರು.


