ಅರ್ಜೆಂಟ್ ಕರೆ ಮಾಡುತ್ತೇನೆಂದು ಮೊಬೈಲ್ ಪಡೆದು ಭಟ್ಕಳ ಠಾಣೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ಭಟ್ಕಳ ನಗರದ ಪೊಲೀಸರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆವೊಡ್ಡಿದ್ದ ಆರೋಪಿತನನ್ನು ಭಟ್ಕಳ ಶಹರ್ ಠಾಣೆ ಪೊಲೀಸರು ತಮಿಳುನಾಡಿನಿಂದ ಪತ್ತೆಹಚ್ಚಿ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬೆದರಿಕೆಯ ಇ-ಮೇಲ್ ಸಂದೇಶ: ಜುಲೈ 10 ರಂದು, ಭಟ್ಕಳ ಶಹರ್ ಪೊಲೀಸ್ ಠಾಣೆಯ ಅಧಿಕೃತ ಇ-ಮೇಲ್ ವಿಳಾಸ bhatkaltownkwr@ksp.gov.in ಗೆ ಎರಡು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ಗಳು ಬಂದಿದ್ದವು. ಮೊದಲ ಇ-ಮೇಲ್ನಲ್ಲಿ “We will plant bomb in Bhatkal town” ಎಂದು, ಹಾಗೂ ಎರಡನೇ ಇ-ಮೇಲ್ನಲ್ಲಿ “All the bombs will blast within 24 hours” ಎಂಬ ಸಂದೇಶಗಳಿದ್ದು, ಈ ಎರಡು ಇ-ಮೇಲ್ಗಳು kannannandika@gmail.com ಎಂಬ ಇ-ಮೇಲ್ ವಿಳಾಸದಿಂದ ಬಂದಿರುವುದು ದೃಢಪಟ್ಟಿತ್ತು ಎಂದು ಪೊಲೀಸರು ತಿಳಿಸಿದರು.
ಸರ್ಕಾರಿ ಸಂಸ್ಥೆಗಳ ಭದ್ರತೆಗೆ ಭಂಗ ಉಂಟುಮಾಡುವ ಉದ್ದೇಶದಿಂದ ಬಂದ ಈ ಬೆದರಿಕೆ ಸಂದೇಶಗಳ ಹಿನ್ನೆಲೆಯಲ್ಲಿ ಭಟ್ಕಳ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 84/2025 ಬಿಎನ್ಎಸ್ ಸೆಕ್ಷನ್ 351(4) ಅಡಿಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆಯಲ್ಲಿ ಈ ಇ-ಮೇಲ್ ಕಳುಹಿಸಿದ ವ್ಯಕ್ತಿ ಕಣ್ಣನ್ ಗುರುಸ್ವಾಮಿ ಎಂದು ಗುರುತಿಸಲಾಗಿತ್ತು.
ಆರೋಪಿತನನ್ನು ಪತ್ತೆ ಹಚ್ಚಲು ಭಟ್ಕಳ ಶಹರ್ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಸ್. ನೇತ್ರತ್ವದಲ್ಲಿ, ಪಿ.ಎಸ್.ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿ ದಿನೇಶ್ ನಾಯಕ ಮತ್ತು ನಾಗರಾಜ ಮೊಗೇರ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ತಮಿಳುನಾಡಿಗೆ ಕಳುಹಿಸಲಾಯಿತು. ಈ ತಂಡವು ತಮಿಳುನಾಡು ರಾಜ್ಯದ ತೆನಿ ಜಿಲ್ಲೆಯ ಬೊಡಿನಾಯಕನೂರು ಪಟ್ಟಣದ ತಿರುಮಲಾಪುರಂ ಪ್ರದೇಶದಲ್ಲಿ ಇರುವ ವಿಳಾಸಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದೆ.
ಬಂಧನದ ಬಳಿಕ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ್ದು, ಅದರಲ್ಲಿ ದಿನಾಂಕ 10/07/2025 ರಂದು ಬೆಳಗ್ಗೆ 7:22 ಮತ್ತು 7:23ಕ್ಕೆ ಭಟ್ಕಳ ಶಹರ್ ಠಾಣೆ ಪೊಲೀಸರಿಗೆ ಕಳುಹಿಸಿದ ಬೆದರಿಕೆ ಮೆಸೇಜ್ಗಳು ಪತ್ತೆಯಾಗಿವೆ. ಆದರೆ ವಿಚಾರಣೆ ವೇಳೆ ಆರೋಪಿಯು, ತನ್ನ ಮೊಬೈಲ್ನ್ನು ಮುನ್ನಾರ ಎಂಬ ಪ್ರದೇಶದಲ್ಲಿ ಏಕಾಂಗಿಯಾಗಿ ನಿಂತಿದ್ದ ವ್ಯಕ್ತಿಯೊಬ್ಬರು ‘ಅರ್ಜೆಂಟ್ ಕರೆ ಮಾಡಲು’ ತೆಗೆದುಕೊಂಡು ಈ ಸಂದೇಶ ಕಳುಹಿಸಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದನು. ಈ ಕುರಿತು ಪರಿಶೀಲಿಸಿದಾಗ ಮುನ್ನಾರ ಠಾಣೆಯ ಪೊಲೀಸರು ತಿಳಿಸಿದಂತೆ, ಸಂಶಯಾಸ್ಪದ ವ್ಯಕ್ತಿ ನಿತೀನ್ ಶರ್ಮಾ ಅಲಿಯಾಸ್ ಖಾಲೀದ್ ಎಂಬಾತನಾಗಿದ್ದು, ಈತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿತ್ತು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ನಿತೀನ್ ಶರ್ಮಾ ವಿರುದ್ಧ ಈಗಾಗಲೇ ಕರ್ನಾಟಕ, ಕೇರಳ, ದೆಹಲಿ, ಮಧ್ಯಪ್ರದೇಶ, ಪುದುಚೇರಿ, ಉತ್ತರಾಖಂಡ, ಒಡಿಶಾ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಈತನು ಇ-ಮೇಲ್ ಮೂಲಕ ಹಲವಾರು ರಾಜ್ಯಗಳ ಪೊಲೀಸರಿಗೆ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದನು ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಈತ ಈವರೆಗೆ ನೈನಿತಾಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ಬೆದರಿಕೆ ಹಾಕಿದ ಆರೋಪದ ಮೇಲೆ ಶಿಕ್ಷೆಗೂ ಒಳಗಾಗಿದ್ದಾನೆ ಎಸ್ಪಿ ತಿಳಿಸಿದರು.
ಆರೋಪಿತ ನಿತೀನ್ ಶರ್ಮಾ ಪ್ರಸ್ತುತ ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿ ಯು.ಟಿ.ಪಿ ನಂ: 1962 ಅಡಿಯಲ್ಲಿ ಬಂಧನದಲ್ಲಿದ್ದಾನೆ. ಭಟ್ಕಳ ಶಹರ್ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆಯ 84/2025 ರಂತೆ ಈತನನ್ನು ಬಾಡಿ ವಾರೆಂಟ್ ಮೇಲೆ ಕರೆತಂದು ತನಿಖೆ ಮುಂದುವರಿಸಲು ಯೋಜನೆ ರೂಪಿಸಲಾಗಿದೆ.
ಈ ಸಂಕೀರ್ಣ ಹಾಗೂ ಗಂಭೀರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ವರಿಷ್ಠಾಧಿಕಾರಿ ಎಂ. ಕೃಷ್ಣಮೂರ್ತಿ ಮತ್ತು ಭಟ್ಕಳ ಉಪ ವಿಭಾಗದ ಉಪಾಧೀಕ್ಷಕ ಮಹೇಶ್ ಎಂ ಅವರು ಅಭಿನಂದಿಸಿದ್ದಾರೆ.


