
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆ ಹೆಚ್ಚುತ್ತಿದೆ, ಅದರಲ್ಲೂ ಯುವ ಸಮುದಾಯ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುತ್ತಿರುವುದು ಆಘಾತಕಾರಿಯಾದ ವಿಚಾರವಾಗಿದೆ. ಇದಕ್ಕೆ ಕಾರಣವೇನು ಎಂದು ಕಂಡುಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಹಲವು ಎಕ್ಸ್ ಪರ್ಟ್ ಗಳ ಅಭಿಪ್ರಾಯವನ್ನು ಪಡೆಯುತ್ತಿದೆ. ಇನ್ನೊಂದು ಕಡೆ, ಈ ವಿಚಾರದಲ್ಲಿ ರಾಜಕೀಯ ಮೇಲಾಟವೂ ನಡೆಯುತ್ತಿರುವುದು ನಮ್ಮ ರಾಜಕೀಯ ವ್ಯವಸ್ಥೆಯ ದುರಂತ.
ಕೋವಿಡ್ ಆರಂಭವಾಗಿ ಅದಕ್ಕೆ ಕೆಲವು ದಿನಗಳ ನಂತರ ಲಸಿಕೆಯನ್ನು ಕಂಡು ಹಿಡಿಯಲಾಯಿತು. ಪ್ರಮುಖವಾಗಿ, ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಅನ್ನು ಹೆಚ್ಚಾಗಿ ಬಳಸಿಕೊಳ್ಳಲಾಯಿತು. ಭಾರತ ಸರ್ಕಾರ ಈ ಲಸಿಕೆಗಳನ್ನು (ಡಬಲ್ ಡೋಸ್) ತೆಗೆದುಕೊಳ್ಳಲು ಭಾರತೀಯರಲ್ಲಿ ನಿರಂತರವಾಗಿ ಪ್ರಚಾರವನ್ನು ಮಾಡಿತ್ತು. ಹಲವಾರು ರಾಷ್ಟ್ರಗಳಿಗೆ ಲಸಿಕೆಯನ್ನು ರಫ್ತು ಕೂಡಾ ಮಾಡಲಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಉತ್ತಮ ಹೆಸರು ತಂದುಕೊಟ್ಟ ವಿದ್ಯಮಾನ ಇದಾಗಿತ್ತು.
ಅಂದಿನಿಂದಲೇ, ಲಸಿಕೆ ಜೊತೆ ಪಾಲಿಟಿಕ್ಸ್ ಕೂಡಾ ಜೊತೆಜೊತೆಯಾಗಿ ಸಾಗಿಗೊಂಡು ಬಂತು. ಕಾಂಗ್ರೆಸ್, ಅಖಿಲೇಶ್ ಯಾದವ್ ಅವರ ಸಮಾಜವಾದಿ ಮುಂತಾದ ಪಾರ್ಟಿಗಳು ಲಸಿಕೆಯ ಬಗ್ಗೆ ವಿವಾದಕಾರೀ ಹೇಳಿಕೆಯನ್ನು ನೀಡುತ್ತಾ, ಜನರನ್ನು ಗೊಂದಲದಲ್ಲಿ ದೂಡುತ್ತಲೇ ಬಂದವು. ಜುಮ್ಲಾ ವ್ಯಾಕ್ಸಿನ್ ಗಳು ಮನುಷ್ಯನನ್ನು ರಕ್ಷಣೆ ಮಾಡುವುದಿಲ್ಲ ಎಂದು ಲೋಕಸಭಾ ವಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಈಗ, ಮತ್ತೆ ಅದರ ಸುತ್ತ ರಾಜಕೀಯ ಆರಂಭವಾಗಿದೆ.



