
ಮಳವಳ್ಳಿ ತಾಲೂಕಿನಲ್ಲಾದ ಅಭಿವೃದ್ದಿ ಕೆಲಸಗಳು ತಮ್ಮಿಂದಲೇ ಆಗಿದೆ ಎಂದು ಶಾಸಕ ನರೇಂದ್ರಸ್ವಾಮಿ ಬಿಂಬಿಸಿಕೊಳ್ಳುತ್ತಿದ್ದು, ಅವರು ಮಂತ್ರಿಯಾಗಿ, ಶಾಸಕರಾಗಿ ಎಷ್ಟು ಅಭಿವೃದ್ಧಿ ಕೆಲಸಗಳನ್ನು ತಾಲೂಕಿಗೆ ತಂದಿದ್ದಾರೆ ಎಂಬುದರ ದಾಖಲೆ ಬಿಡುಗಡೆ ಮಾಡಿ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಅನ್ನದಾನಿ ಆಹ್ವಾನಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ೨೦ ಮತ್ತು ೧೪ ತಿಂಗಳ ಅವಧಿಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳ ದಾಖಲೆ ಪ್ರಕಟಿಸಿದ ಅವರು, ನರೇಂದ್ರಸ್ವಾಮಿ ಅವರು, ತಾವು ಮಾಡಿದ ಅಭಿವೃದ್ಧಿ ಕೆಲಸಗಳ ದಾಖಲೆ ಸಮೇತ ಚರ್ಚೆಗೆ ಬರಲಿ. ಅವರೇ ದಿನಾಂಕ ನಿಗದಿ ಪಡಿಸಿ, ಚರ್ಚೆಗೆ ಕರೆಯಲಿ ಎಂದು ಸವಾಲು ಹಾಕಿದರು.
ನಾನು ದೇವರಾಜ ಅರಸು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ವೇಳೆ ಹಿಂದುಳಿದ ವರ್ಗದ ಜನರಿಗೆ ಅನುದಾನ ಒದಗಿಸಿ, ಅಭಿವೃದ್ಧಿಯತ್ತ ಸಾಗಲು ಸಹಾಯ ಮಾಡಿದ್ದೇನೆ. ಇದರಿಂದ ಕುರುಬ, ಕುಂಬಾರ, ತಿಗಳ ಸೇರಿದಂತೆ ಹಲವು ಸಮಾಜದವರು ಅಭಿವೃದ್ಧಿಯ ಹಾದಿಗೆ ಸಾಗಲು ಸಹಕಾರಿಯಾಗಿದೆ ಎಂದು ದಾಖಲೆಗಳನ್ನು ಮುಂದಿಟ್ಟರು.
೨೦೨೪ರ ಜನವರಿ ೦೧ರಂದು ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಪ್ರತಿಭಟನೆ ನಡೆಸಿದ್ದು, ಅದರ ಫಲವಾಗಿ ತಹಸೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆದು ೩೦೫ ಎಕರೆಯ ಅಕ್ರಮ ಖಾತೆಗಳ ರದ್ದು ಮಾಡಲಾಗಿದೆ. ಈಗ ಇದರ ಲಾಭವನ್ನು ಮಿಸ್ಟರ್ ಎಂಎಲ್ಎ ಪಡೆಯುತ್ತಿದ್ದಾರೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂರಿಗಾಲಿಯಲ್ಲಿ ಶಾಲೆಯ ಕಾಂಪೌಂಡ್ ಹಾಗೂ ವಾಟರ್ ಟ್ಯಾಂಕ್ ತೆರವುಗೊಳಿಸಿ ಮನೆ ನಿರ್ಮಿಸಿರುವುದಾಗಿ ಗ್ರಾಮದ ಫಣೀಶ್ ದೂರು ದಾಖಲು ಮಾಡಿದ್ದಾರೆ. ಇಂತಹ ಅಕ್ರಮಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಹಾಡೇಳುವವನು’ ಎಂದು ಅಪಹಾಸ್ಯ ಮಾಡುತ್ತಿದ್ದು, ನಾನೊಬ್ಬ ಜನಪದ ಕಲಾವಿದ ಹಾಡೇಳುವುದು ನನ್ನ ಕಲೆ ಎರಡು ಪದವಿ ಪಡೆದು, ಜನಪದ ಪಿಹೆಚ್ಡಿಯನ್ನು ಪಡೆದಿದ್ದೇನೆ. ಅಸಮರ್ಥ, ಹಾಡಿನ ಗಿರಾಕಿ ಎಂಬ ಅಪಹಾಸ್ಯದ ಪದ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ನಿನ್ನ ವಿರುದ್ಧ ಬೇರೆ ತರಹದ ಪದಬಳಕೆ ಮಾಡಬೇಕಾಗುವುದು ಎಂದು ಎಚ್ಚರಿಸಿದರು.


