
ನವದೆಹಲಿ: ಭಾರತವು ಆಪರೇಷನ್ ಸಿಂಧೂರ್(Operation Sindoor) ಅಡಿಯಲ್ಲಿ ಪಾಕಿಸ್ತಾನ(Pakistan)ದ 9 ಸ್ಥಳಗಳಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ, ಪಂಜಾಬ್ನ ಅಮೃತಸರದಲ್ಲಿರುವ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಕ್ಷಿಪಣಿಗಳು ಮತ್ತು ಡ್ರೋನ್ ಮೂಲಕ ದಾಳಿ ಮಾಡಿತ್ತು.ಈ ಕುರಿತು ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಈ ಮಾಹಿತಿ ನೀಡಿದ್ದು, ಸೇನಾ ವಾಯು ರಕ್ಷಣಾ ಗನ್ನರ್ಗಳು ಸುವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ನಡೆಸಿದ ಎಲ್ಲಾ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ಹೇಳಿದ್ದಾರೆ.ಪಾಕಿಸ್ತಾನವು ಸ್ವರ್ಣ ಮಂದಿರದಂತಹ ಧಾರ್ಮಿಕ ಸ್ಥಳಗಳು ಸೇರಿದಂತೆ, ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಬಹುದು ಎಂದು ಸೇನೆ ಆಗಲೇ ನಿರೀಕ್ಷಿಸಿತ್ತು, ಅದಕ್ಕೆ ಬೇಕಾದ ಕ್ರಮಗಳನ್ನು ಕೂಡ ತೆಗೆದುಕೊಂಡಿತ್ತು. ಪಾಕಿಸ್ತಾನ ಸೇನೆಯು ಯಾವುದೇ ಸಮರ್ಪಕ ಗುರಿಗಳನ್ನು ಹೊಂದಿಲ್ಲ ಎಂದು ತಿಳಿದಿದ್ದರೂ,ಕೆಲವು ನಿರೀಕ್ಷೆಗಳಿದ್ದವು ಇವುಗಳಲ್ಲಿ, ಗೋಲ್ಡನ್ ಟೆಂಪಲ್ ಅತ್ಯಂತ ಪ್ರಮುಖವಾದದ್ದು ಎಂದು ಕಂಡುಬಂದಿದೆ.ಮೇ 8 ರಂದು ಪಾಕಿಸ್ತಾನವು ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳು, ಮುಖ್ಯವಾಗಿ ಡ್ರೋನ್ಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿಕೊಂಡು ಬೃಹತ್ ವಾಯುದಾಳಿ ನಡೆಸಿತು ಎಂದು ಅವರು ಹೇಳಿದರು.
ನಾವು ಇದನ್ನು ನಿರೀಕ್ಷಿಸಿದ್ದರಿಂದ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೆವು, ಮತ್ತು ನಮ್ಮ ಧೈರ್ಯಶಾಲಿ ಮತ್ತು ಜಾಗರೂಕ ಸೇನಾ ವಾಯು ರಕ್ಷಣಾ ಗನ್ನರ್ಗಳು ಪಾಕಿಸ್ತಾನ ಸೇನೆಯ ದುಷ್ಟ ಯೋಜನೆಗಳನ್ನು ವಿಫಲಗೊಳಿಸಿದರು ಮತ್ತು ಸುವರ್ಣ ದೇವಾಲಯವನ್ನು ಗುರಿಯಾಗಿಸಿಕೊಂಡ ಎಲ್ಲಾ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದರು. ಅವರು ಸ್ವರ್ಣ ಮಂದಿರಕ್ಕೆ ಒಂದು ಚೂರು ಹಾನಿಯಾಗಲು ಕೂಡ ಬಿಡಲಿಲ್ಲ.ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್ -70 ಏರ್ ಡಿಫೆನ್ಸ್ ಗನ್ಸ್ ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಅಮೃತಸರದ ಸ್ವರ್ಣ ದೇವಾಲಯ ಮತ್ತು ಪಂಜಾಬ್ ನಗರಗಳನ್ನು ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಹೇಗೆ ರಕ್ಷಿಸಿದವು ಎಂಬುದರ ಕುರಿತು ಮಾತನಾಡಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ಕ್ರಮ ಕೈಗೊಂಡು, 9 ಉಗ್ರರ ನೆಲೆ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಪಾಕ್ ಸೇನೆ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಗುರಿಯಾಗಿಸಿಕೊಂಡಿತ್ತು ಎಂದು ಭಾರತೀಯ ಸೇನೆ ಮಾಹಿತಿ ಬಹಿರಂಗಪಡಿಸಿದೆ.


