
ನವದೆಹಲಿ, ಮೇ 10: ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ (India Pakistan War) ಮತ್ತಷ್ಟು ಬಿಗಡಾಯಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಸೇನಾ ಪಡೆ (Indian Army) ಎರಡು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ 2 ಜೆಟ್ಗಳನ್ನು ಶನಿವಾರ ಹೊಡೆದುರುಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಮೂಲಗಳ ಪ್ರಕಾರ, 2 ಪಾಕಿಸ್ತಾನಿ ಜೆಟ್ಗಳನ್ನು ಶ್ರೀನಗರದ ಬಳಿ ಹೊಡೆದುರುಳಿಸಲಾಗಿದೆ.ಶ್ರೀನಗರದ ಬುದ್ಗಾ-ಬಾರಾಮುಲ್ಲಾಪ್ರದೇಶದಲ್ಲಿ ಎರಡು ಪಾಕಿಸ್ತಾನಿ ಜೆಟ್ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಅವುಗಳಲ್ಲಿದ್ದ ಪೈಲಟ್ಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ಘಟನೆಯ ಬಗ್ಗೆ ರಕ್ಷಣಾ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಭಾರತೀಯ ಸೇನೆ ಹೊಡೆದುರುಳಿಸಿರುವುದು F-16 ಜೆಟ್ಗಳು ಎಂದು ವರದಿಯಾಗಿದೆ. ಏತನ್ಮಧ್ಯೆ, ಉಭಯ ರಾಷ್ಟ್ರಗಳ ವಾಯುಪಡೆಗಳ ನಡುವಣ ದಾಳಿ, ಪ್ರತಿದಾಳಿ ಮುಂದುವರಿದಿರುವುದನ್ನು ಸರ್ಕಾರಿ ಮೂಲಗಳು ದೃಢಪಡಿಸಿವೆ.ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿ ಪಾಕಿಸ್ತಾನ ಶನಿವಾರವೂ ಹಲವಾರು ಡ್ರೋನ್ ದಾಳಿಗಳನ್ನು ನಡೆಸಿದೆ. ಶನಿವಾರ ಬೆಳಗಿನ ಜಾವ ಪಾಕಿಸ್ತಾನವು ಜಮ್ಮು ವಾಯುನೆಲೆ ಮತ್ತು ಉಧಂಪುರ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಆದರೆ, ಭಾರತ ಈ ದಾಳಿಯನ್ನು ವಿಫಲಗೊಳಿಸಿದೆ. ಫತೇಹ್-1 ಕ್ಷಿಪಣಿಯನ್ನು ಪಾಕಿಸ್ತಾನದಿಂದ ಹಾರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪಾಕಿಸ್ತಾನದ ಕ್ಷಿಪಣಿ ಬಿದ್ದಿದೆ. ಅದರ ಅವಶೇಷಗಳನ್ನು ಹೊರತೆಗೆಯಲಾಗಿದೆ. ಉಧಮ್ಪುರದ ಹಲವು ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಇನ್ನೂ ಕೇಳಿಬರುತ್ತಿದೆ.
ಶುಕ್ರವಾರ ರಾತ್ರಿ ಪಾಕಿಸ್ತಾನ 26 ಸ್ಥಳಗಳ ಮೇಲೆ ದಾಳಿ ಮಾಡಿತು. ಇದಾದ ನಂತರ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಎಲ್ಒಸಿಯಲ್ಲಿ ಹಲವು ಸ್ಥಳಗಳಲ್ಲಿ ನಿರಂತರ ಗುಂಡಿನ ಚಕಮಕಿ ನಡೆಯುತ್ತಿದೆ.ಪಾಕಿಸ್ತಾನ ಮತ್ತೊಮ್ಮೆ ಪಂಜಾಬ್ನ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಪಂಜಾಬ್ನ ಅಮೃತಸರದಲ್ಲಿ ಭಾರತೀಯ ವಾಯು ರಕ್ಷಣಾ ಪಡೆಗಳು ಹಲವಾರು ಪಾಕಿಸ್ತಾನಿ ಡ್ರೋನ್ಗಳನ್ನು ತಟಸ್ಥಗೊಳಿಸಿವೆ.ಭಾರತವು ಆಪರೇಷನ್ ಸಿಂಧೂರ್ ಪ್ರಾರಂಭಿಸಿದಾಗಿನಿಂದ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಪಾಕಿಸ್ತಾನವು ಸತತ ನಾಲ್ಕನೇ ದಿನವಾದ ಇಂದು ಕೂಡ ಭಾರತದ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿಗಳ ದಾಳಿ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರದ ಪಠಾಣ್ಕೋಟ್ ಮತ್ತು ಶ್ರೀನಗರ ವಾಯುನೆಲೆಗಳಲ್ಲಿ ಭಾರಿ ಸ್ಫೋಟಗಳ ಶಬ್ದ ಕೇಳಿಬಂದಿದೆ. ಭಾರತವೂ ಸೂಕ್ತ ತಿರುಗೇಟು ನೀಡುತ್ತಿದೆ. ಜಲಂಧರ್ನ ಕಾಂಗ್ನಿವಾಲ್ ಗ್ರಾಮದಲ್ಲಿ ಸ್ಫೋಟದ ನಂತರ ಪಾಕಿಸ್ತಾನಿ ಡ್ರೋನ್ನ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ.