
ಬೆಂಗಳೂರು, ಮಾರ್ಚ್ 17: ಅಕ್ರಮವಾಗಿ ಚಿನ್ನ (Gold smuggling case) ಸಾಗಿಸುತ್ತಿದ್ದಾಗ ನಟಿ ರನ್ಯಾ ರಾವ್ (Actress Ranya Rao) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಚಿನ್ನ ಮಾರಾಟಕ್ಕೆ ದುಬೈನಲ್ಲೇ ರನ್ಯಾ ಮತ್ತು ತರುಣ್ ಕಂಪನಿ ಸ್ಥಾಪಿಸಿದ್ದರು ಅನ್ನೋದು ಗೊತ್ತಾಗಿದೆ. ಈ ಮಧ್ಯೆ ರನ್ಯಾ ಪತಿ ಜತಿನ್ ಹುಕ್ಕೇರಿ ಅವರು ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮೆಟ್ಟಿಲೇರಿದ್ದು, ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಜೊತೆಗೆ ಅರ್ಜಿ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿ.ಆರೋಪಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾ.ಹೇಮಂತ್ ಚಂದನಗೌಡರ್ ಪೀಠದಲ್ಲಿ ಅರ್ಜಿ ವಿಚಾರಣೆ ಮಾಡಲಾಗಿದ್ದು, ಜತಿನ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.ಯಾವಾಗ ಆಕ್ಷೇಪಣೆ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದು ಜಡ್ಜ್ ಪ್ರಶ್ನಿಸಿದ್ದು, ಸೋಮವಾರ ಆಕ್ಷೇಪಣೆ ಸಲ್ಲಿಸುವುದಾಗಿ ಡಿಆರ್ಐ ಪರ ವಕೀಲರು ಹೇಳಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 24ಕ್ಕೆ ಮುಂದೂಡಿದ್ದು, ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.
ಇನ್ನು ನವೆಂಬರ್ನಲ್ಲಿ ರನ್ಯಾ ರಾವ್ರನ್ನು ಜತಿನ್ ಮದುವೆಯಾಗಿದ್ದರು. ಆದರೆ ಡಿಸೆಂಬರ್ನಲ್ಲಿ ಮನಸ್ತಾಪ ಶುರುವಾಗಿತ್ತು. ದಾಂಪತ್ಯವೂ ಸರಿಯಾಗಿರಿಲಿಲ್ಲವಂತೆ. ಹೀಗಂತ ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ಶುರು ಮಾಡಿದ್ದರು. ಪದೇ ಪದೆ ರನ್ಯಾ ದುಬೈ ಟ್ರಿಪ್ಗೆ ಪತಿಗೆ ಅನುಮಾನ ಬಂದು ಜಗಳವಾಗಿದೆ. ಈ ಜಗಳ ಡಿವೋರ್ಸ್ ಹಂತಕ್ಕೂ ತಲುಪಿದೆ. ಹೀಗಾಗಿ ಪತಿಯೇ ಸಚಿವರೊಬ್ಬರಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಪರಿಶೀಲಿಸುವಂತೆ ಡಿಆರ್ಐ ಅಧಿಕಾರಿಗಳಿಗೆ ಸಚಿವರು ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಜ್ಯುವೆಲ್ಲರ್ಸ್ ವ್ಯಾಪಾರಿಗಳು ಮಾಹಿತಿ ನೀಡಿರುವ ಅನುಮಾನವೂ ಇದೆ. ಈ ಮಾಹಿತಿ ಪಡೆದ ಡಿಆರ್ಐ ಅಧಿಕಾರಿಗಳು ರನ್ಯಾ ಮೇಲೆ ಕಣ್ಣಿಟ್ಟು ಲಾಕ್ ಮಾಡಿದ್ದರು.
ರನ್ಯಾರಾವ್ ಅರೆಸ್ಟ್ ಆದ ಮೇಲೆ ಪತಿ ಜತೀನ್ ಹುಕ್ಕೇರಿಯನ್ನೂ ಡಿಆರ್ಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಇದರಿಂದ ಬಂಧನ ಭೀತಿಗೆ ಒಳಗಾಗಿದ್ದ ಜತೀನ್ ಹೈಕೋರ್ಟ್ ಮೆಟ್ಟಲೇರಿದ್ದರು. ಜತಿನ್ ಹುಕ್ಕೇರಿ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ಪತ್ನಿಯ ಮೇಲಿನ ಆರೋಪಕ್ಕೂ ಜತಿನ್ಗೂ ಸಂಬಂಧವಿಲ್ಲ. ಮದುವೆಯಾದ ಒಂದೇ ತಿಂಗಳಿಗೆ ಇಬ್ಬರ ನಡುವೆ ಮನಸ್ತಾಪ ಇತ್ತು ಅಂತಾ ವಾದ ಮಾಡಿದ್ದರು. ಇದೀಗ ಕೋರ್ಟ್ ಕಾನೂನು ಪ್ರಕ್ರಿಯೆಯಿಲ್ಲದೇ ಬಂಧಿಸುವಂತಿಲ್ಲವೆಂದು ಆದೇಶ ನೀಡಿದೆ.


